Published in the Sunday Prajavani on 27 July 2025
ನರ್ಮದಾ ಘಾಟ್ನಲ್ಲಿ ವಿರಾಜಮಾನವಾಗಿ ನಿಂತಿರುವ ದೇವಿ ಅಹಿಲ್ಯಾ ಬಾಯಿ ಹೋಲ್ಕರ್ ಅವರ ಭವ್ಯ ಪ್ರತಿಮೆಯ ಮುಂದೆ ನಾನು ನಿಂತಿದ್ದೆ. ಅದರ ಮೇಲೆ “1727ರಿಂದ 1795” ಎಂಬ ಕೆತ್ತನೆ ಎದ್ದು ಕಾಣುತ್ತಿತ್ತು. ಅದನ್ನು ನೋಡನೋಡುತ್ತಲೇ ದೂರದೃಷ್ಟಿಯ ಆ ರಾಣಿಯ ಬಗ್ಗೆ ಹೃದಯಾಂತರಾಳದಿAದ ಗೌರವ ತುಂಬಿಬಂತು. ಶತಮಾನಗಳ ನಂತರವೂ ಬೆರಗು ಮೂಡಿಸುವಂತೆ ಇಂದೋರ್ ನಗರದ ಭೂಚಿತ್ರಣವನ್ನು ಪರಿವರ್ತಿಸಿದ, ರಸ್ತೆಗಳನ್ನು ಹಾಗೂ ನದಿ ದಂಡೆಯ ಘಟ್ಟಗಳನ್ನು ನಿರ್ಮಿಸಿದ ಹಿರಿಮೆ ಅವರದ್ದು. ಅವರ ಸಾಧನೆಗಳು ಕೇವಲ ಆ ಕಾಲಘಟಕ್ಕೆ ಮಾತ್ರವಲ್ಲ, ಇಂದಿನ ಮಾನದಂಡಗಳ ದೃಷ್ಟಿಯಿಂದಲೂ ಕ್ರಾಂತಿಕಾರಕ ಎನ್ನಿಸುವಂಥದ್ದಾಗಿವೆ.
ಒಂದೊಮ್ಮೆ ಮಧ್ಯ ಭಾರತದ ಪ್ರಮುಖ ಮರಾಠ ಸಾಮ್ರಾಜ್ಯಗಳಲ್ಲೊಂದಾಗಿದ್ದ ಹೋಲ್ಕರ್ ವಂಶಜರ ಆಳ್ವಿಕೆಯಲ್ಲಿದ್ದ ಇಂದೋರ್ ನಗರವು ಪ್ರಾಚೀನ ವೈಭವಕ್ಕೆ ಇಣುಕು ನೋಟ ನೀಡುವ ಕಿಟಕಿಯಂತೆ ಭಾಸವಾಗುತ್ತವೆ. ಆಜಾಬಾಜಿನಲ್ಲಿರುವ ಉಜ್ಜಯಿನಿ, ಮಂಡು, ಓಂಕಾರೇಶ್ವರ ಮತ್ತು ಮಹೇಶ್ವರ ಈ ಸ್ಥಳಗಳಿಗೆ ತೆರಳಲು ಕೂಡ ಇದು ಅನುಕೂಲಕರ ನಗರವಾಗಿದೆ. ಜೊತೆಗೆ, ಖಾದ್ಯ ಪ್ರಿಯರ ಸ್ವರ್ಗವೂ ಆಗಿದೆ.
ಕಳೆದ ಸೆಪ್ಟೆಂಬರ್ನಲ್ಲಿ ನಮ್ಮ ಕುಟುಂಬದವರು, ಅಂದರೆ ವೀಣಾ, ಸುಧೀರ್, ನೀಲ್, ಹೆತಾ, ಕಂದಮ್ಮ ರಯಾ, ನನ್ನ ಮಗಳು ಸಾರಾ ಹಾಗೂ ನನ್ನ ತಾಯಿ ಇಂದೋರ್ ಮತ್ತು ಮಹೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದೆವು. ಅದು ವಿವಿಧ ಪೀಳಿಗೆಯವರನ್ನು ಒಳಗೊಂಡಿದ್ದ ಪ್ರವಾಸ. ವಿಭಿನ್ನ ಆಸಕ್ತಿಗಳಿರುವವರು ಇದ್ದಾಗ ಎಲ್ಲರಿಗೂ ಒಪ್ಪಿಗೆಯಾಗುವ ಪ್ರವಾಸವನ್ನು ಯೋಜಿಸುವುದು ಒಂದು ಕಸರತ್ತೇ ಹೌದು. ಹೀಗಾಗಿ, “ನಮ್ಮೆಲ್ಲರ ಸಮಯ” ಹಾಗೂ “ನಮ್ಮದೇ ಸಮಯ” ಇವೆರಡಕ್ಕೂ ಒಪ್ಪುವಂತಹ ಸೂಕ್ತ ಸಂಯೋಜನೆಯಿಂದ ಕೂಡಿದ ಪ್ರವಾಸ ಯೋಜಿಸಲು ನಮ್ಮ ಕಸ್ಟಮೈಸ್ಡ್ ಹಾಲಿಡೇಸ್ ವಿಭಾಗದವರನ್ನು ಅವಲಂಬಿಸಿದ್ದೆವು. ಇದರಿಂದಾಗಿ, ನಮ್ಮ ಸಾಮಾನು-ಸರಂಜಾಮಿನ ವ್ಯವಸ್ಥಾಪನೆ ಬಗ್ಗೆ ಯಾವುದೇ ಚಿಂತೆಯಿಲ್ಲದೆ ಮುಕ್ತವಾಗಿ ಪ್ರಯಾಣಿಸಲು ನಮಗೆ ಸಾಧ್ಯವಾಯಿತು.
ಸ್ಥಳೀಯರು “ಬ್ರಹ್ಮಾಂಡದ ಕೇಂದ್ರ” ಎಂಬ ಅರ್ಥ ನೀಡುವ ಹೆಸರಿನಿಂದ ಕರೆಯುವ ದ್ವೀಪದಲ್ಲಿರುವ ಬಾಲೇಶ್ವರ ದೇಗುಲಕ್ಕೆ ಪ್ರಶಾಂತವಾಗಿ ಹರಿದು ಸಾಗುವ ನರ್ಮದಾ ನದಿಯಲ್ಲಿ ದೋಣಿ ಯಾನದ ಮೂಲಕ ನಮ್ಮ ಅನ್ವೇಷಣೆ ಮೊದಲಾಯಿತು. ನೀರಿನಿಂದ ಸುತ್ತುವರಿದಿರುವ ಹಾಗೂ ಶಾಂತ ಪರಿಸರದ ಮಡಿಲಿನಲ್ಲಿರುವ ಆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುವುದೇ ಒಂದು ರೀತಿಯ ಸಮಾಧಾನ ಭಾವ ಮೂಡಿಸುತ್ತದೆ. ಇನ್ನು ಸಂಜೆ ಅಲ್ಲಿ ನರ್ಮದಾ ಆರತಿ ಕಣ್ತುಂಬಿಕೊAಡೆವು. ಅಲ್ಲಿನ ಘಾಟ್ಗಳನ್ನು ದೀಪಗಳಿಂದ ಬೆಳಗಿಸುವ, ಮಂತ್ರಘೋಷಗಳಿಂದ ಅನುರಣಿಸುವಂತೆ ಮಾಡುವ ಹಾಗೂ ಶ್ರದ್ಧಾಭಕ್ತಿಗಳಿಂದ ಕೂಡಿದ ಈ ಆಧ್ಯಾತ್ಮಿಕ ವಿಧಿಯು ಮನಸ್ಸನ್ನು ಹಗುರಾಗಿಸುವ ದಿವ್ಯ ಕ್ಷಣಗಳನ್ನು ಕೊಡಮಾಡುತ್ತದೆ.
ಮರುದಿನ ಬೆಳಿಗ್ಗೆ ವೀಣಾ, ಸುಧೀರ್ ಹಾಗೂ ನನ್ನ ಅಮ್ಮ 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಓಂಕಾರೇಶ್ವರಕ್ಕೆ ತೆರಳಿದರು. ನೀಲ್, ಹೆತಾ, ಕೂಸು ರಯಾ ಹಾಗೂ ನಾನು ಇಂದೋರ್ನಲ್ಲೇ ಅಡ್ಡಾಡಲೆಂದು ಉಳಿದುಕೊಂಡೆವು. ಪುನಃ ನದಿಯ ಸೆಳೆತಕ್ಕೆ ಓಗೊಟ್ಟು ಅಲ್ಲಿನ ಘಾಟ್ಗಳೆಡೆಗೆ ಹೊರಟೆವು. ಗತಕಾಲದ ಅಲ್ಲಿನ ಮೆಟ್ಟಿಲುಗಳ ಮೇಲೆ ಸಾಗುವಾಗ ಅವು ನಮ್ಮನ್ನು ಕಾಲಾತೀತ ಲೋಕಕ್ಕೆ ಕರೆದೊಯ್ಯುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ. ಅದಕ್ಕೆ ಮುನ್ನ ನಾನು ವಾರಣಾಸಿಯ ಘಾಟ್ಗಳನ್ನು ನೋಡಿದ್ದೆ. ಅವಕ್ಕೆ ಹೋಲಿಸಿದರೆ ನರ್ಮದಾ ತಟದ ಘಾಟ್ಗಳು ಹೆಚ್ಚು ಸೌಮ್ಯವೂ ಪ್ರಶಾಂತತೆಯಿಂದ ಕೂಡಿರುವಂತೆಯೂ ಕಂಡುಬರುತ್ತವೆ. ಚಳಿಗಾಲದ ಸಂದರ್ಭದಲ್ಲಿ ಮತ್ತೊಮ್ಮೆ ಇಲ್ಲಿಗೆ ಬಂದು ನಿರುಮ್ಮಳವಾಗಿ ಸುಮ್ಮನೇ ಕುಳಿತು ಕಾಲವೇ ಸ್ತಬ್ಧವಾಗುವ ಭಾವವನ್ನು ಅನುಭವಿಸಬೇಕು ಎಂದು ನನ್ನಷ್ಟಕ್ಕೆ ನಾನು ಸಂಕಲ್ಪ ಮಾಡಿಕೊಂಡೆ.
ಅಲ್ಲಿನ ಘಟ್ಟಗಳ ಬಳಿಯೇ ಶಿಲ್ಪಕಲಾ ಕೆತ್ತನೆಯ ದೇವಾಲಯವೊಂದಿದೆ. ಅಲ್ಲಿ ವಿವಾಹಪೂರ್ವ ಫೋಟೋ ಷೂಟ್ಗಳು ನಡೆಯುವುದು ಸಾಮಾನ್ಯ. ದುಬೈ ಅಥವಾ ಪ್ಯಾರಿಸ್ನಂತಹ ಸ್ಥಳಗಳಲ್ಲಿ ಫೋಟೋ ಷೂಟ್ಗಳನ್ನು ಆಯೋಜಿಸುವಂತೆ. ನಮ್ಮ ವೀಣಾ ವರ್ಲ್ಡ್ ಗೆ ಸಾಕಷ್ಟು ಕೋರಿಕೆಗಳು ಬರುತ್ತವೆ. ಆದರೆ, ಪರಂಪರೆ ಹಾಗೂ ಸೊಬಗು ಮೇಳೈಸಿದಂತಿರುವ ನರ್ಮದಾ ತಟದ ಈ ದೇಗುಲದ ಸಾನ್ನಿಧ್ಯದಲ್ಲಿ, ಭಾರತದಲ್ಲಿ ಇಂತಹ ಅದೆಷ್ಟು ಅಮೂಲ್ಯ ನಿಧಿಗಳು ಇವೆಯಲ್ಲವೇ ಎಂದೆನ್ನಿಸಿತು. ಅದೇ ವೇಳೆ, ಸ್ಥಳೀಯ ಛಾಯಾಗ್ರಾಹಕರೊಬ್ಬರು ನಮ್ಮ ಬಳಿ ಬಂದು, “ಫೋಟೋ ಷೂಟ್ ಮಾಡಿಸಿಕೊಳ್ಳಿ” ಎಂದು ಕೇಳಿದರು. ನಾನು ಹಿಂದೆ-ಮುಂದೆ ಯೋಚಿಸುತ್ತಿರುವಾಗಲೇ ಒಪ್ಪಿಗೆ ಸೂಚಿಸುವಂತೆ ನೀಲ್ ಕಡೆಯಿಂದ ಉತ್ತೇಜನದ ಧ್ವನಿ ಬಂತು. ಫೋಟೋ ಷೂಟ್ಗೆ ಒಪ್ಪಿಕೊಳ್ಳುವಂತೆ ನೀಲ್ ಹೇಳಿದ್ದು ಒಳ್ಳೆಯದೇ ಆಯಿತು. ಅವು ನಮಗೆ ಬಹಳ ಸಂತಸದ ಕ್ಷಣಗಳಾದವು. ಮರೆಯಲಾಗದ ಅನುಭವವನ್ನು ಹಾಗೂ ಹೃದಯವನ್ನು ಬೆಚ್ಚಗಾಗಿಸುವ ಸುಂದರ ಛಾಯಾಚಿತ್ರಗಳನ್ನು ನಮಗೆ ಲಭ್ಯವಾಗಿಸಿದವು.
ನಂತರ, ಅದೇ ದಿನ ನಾವೆಲ್ಲರೂ ಒಂದೆಡೆ ಸೇರಿ ಮಹೇಶ್ವರದ ಕೈಮಗ್ಗದ ಘಟಕಗಳಿಗೆ ಭೇಟಿ ನೀಡಿದೆವು. ಮಹೇಶ್ವರಿ ಎಂಬ ಹೆಸರಿನ ಹೆಸರಾಂತ ಸೀರೆಗಳನ್ನು ಸಿದ್ಧಪಡಿಸುವ ಘಟಕಗಳು ಇವಾಗಿವೆ. ಅಂದಂತೆ, ಮಹೇಶ್ವರವು ಪರಂಪರೆಯಲ್ಲಿ ಬೇರುಬಿಟ್ಟ ಜವಳಿ ವಲಯವೇ ಹೌದು. ಅಲ್ಲಿನ ರೇಹ್ವಾ ಸೊಸೈಟಿಯಲ್ಲಿ ಕುಶಲಕರ್ಮಿಗಳು ನೂಲಿನ ಎಳೆಗಳಿಗೆ ಬಣ್ಣ ಲೇಪಿಸುವುದನ್ನು, ಮಗ್ಗಗಳಲ್ಲಿ ನೂಲು ನೇಯುವುದನ್ನು ಹಾಗೂ ನಾಜೂಕಿನಿಂದ ವಿನ್ಯಾಸಗಳ ಚಿತ್ತಾರ ಮೂಡಿಸುವುದನ್ನು ನೋಡಿ ನಾವೆಲ್ಲರೂ ಬೆರಗುಗೊಂಡೆವು. ಅಲ್ಲಿ ಪ್ರತಿಯೊಂದು ಸೀರೆಯ ಮೇಲೂ ಅದನ್ನು ನೇಯ್ದ ವ್ಯಕ್ತಿಯ ಹೆಸರನ್ನೂ ಅಚ್ಚೊತ್ತುವುದು ವಿಶೇಷವೇ ಸೈ. ಕೆಲವಾರು ಸೀರೆಗಳು ಹಾಗೂ ದುಪ್ಪಟ್ಟಾಗಳನ್ನು ಖರೀದಿಸಿ ಅಲ್ಲಿಂದ ನಿರ್ಗಮಿಸಿದೆವು.
ಅದಾದ ಮೇಲೆ ನಮ್ಮ ಖಾದ್ಯ-ಸವಿ ಸಾಹಸಗಾಥೆಯು ಇಂದೋರ್ನ ಛಪ್ಪನ್ ದುಖಾನ್ನೊಂದಿಗೆ ಶುರುವಾಯಿತು. ಇದು 56 ಆಹಾರ ಮಳಿಗೆಗಳಿರುವ ಒಂದು ಸ್ಟ್ರೀಟ್ ಫುಡ್ ರಸ್ತೆಯಲ್ಲಿದೆ. ನಾವು ಅಲ್ಲಿದ್ದ ಸಂದರ್ಭದಲ್ಲಿ ಮಳೆ ಬರುತ್ತಿತ್ತಾದರೂ ನಮ್ಮ ಉತ್ಸಾಹವೇನೂ ಕಡಿಮೆಯಾಗಲಿಲ್ಲ. ಹುಳಿಯುಕ್ತ ಕಚೋರಿ ಇನ್ನಿತರ ತಿನಿಸು ಸವಿದು ನಂತರ ಸ್ಥಳೀಯ ಜನಜನಿತ ಜಾನ್ಹಿ ಹಾಟ್ ಡಾಗ್ಸ್ ಗೆ ಹೋಗಿ ದಬೇಲಿ, ಕಾರ್ನ್ ಚಾಟ್ ಹಾಗೂ ಕುಲ್ಹಾದ್ ಪಿಜ್ಜಾಗಳ ರುಚಿ ನೋಡಿದೆವು (ಹೌದು, ಮಣ್ಣಿನ ಬೋಗುಣಿಯಲ್ಲಿ ನೀಡಲಾಗುವ ಪಿಜ್ಝಾ ಅದು!). ಅವುಗಳ ಪ್ರತಿಯೊಂದು ತುಣುಕು ಕೂಡ ವಿಶಿಷ್ಟ ಸ್ವಾದದಿಂದಾಗಿ ಬಾಯಲ್ಲಿ ನೀರೂರಿಸುತ್ತಿತ್ತು. ಅಲ್ಲಿ ಹೊಟ್ಟೆ ತುಂಬಾ ವಿವಿಧ ತಿನಿಸುಗಳನ್ನು ಸವಿದು ಹಸನ್ಮುಖದೊಂದಿಗೆ ಹೊರಟೆವು.
ನಂತರ ಹೋಲ್ಕರ್ ವಂಶಸ್ಥರು 19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ನಿರ್ಮಿಸಿದ ಲಾಲ್ಬಾಗ್ ಅರಮನೆಗೆ ಹೋದೆವು. ಯೂರೊಪ್ ಶೈಲಿಯಿಂದ ಪ್ರೇರಿತವಾಗಿರುವ ಈ ಅರಮನೆಯು ಅಮೃತಶಿಲೆಯ ಸ್ತಂಭಗಳು, ಸ್ವರ್ಣಲೇಪಿತ ಒಳಮಾಳಿಗೆಗಳು ಹಾಗೂ ನರ್ತನಕ್ಕೆ ಅನುಕೂಲವಾಗಲೆಂದು ಸ್ಪ್ರಿಂಗುಗಳನ್ನು ಬಳಸಿ ನಿರ್ಮಿಸಲಾದ ಬಾಲ್ ರೂಮ್ನಿಂದ ಕೂಡಿದೆ. ಒಂದೊಮ್ಮೆ ಕಂಗೊಳಿಸುವ ಗುಲಾಬಿ ಉದ್ಯಾನಗಳಿಂದ ಸುತ್ತುವರಿಯಲ್ಪಟ್ಟಿದ್ದ ಈ ಲಾಲ್ಬಾಗ್ ಪ್ರಸ್ತುತ ರಾಜವೈಭವ, ಸೊಬಗು ಹಾಗೂ ಚರಿತ್ರೆಯ ಕುರುಹಾಗಿದೆ.
ಅಲ್ಲಿಂದ ಮುಂದೆ ರಾಜವಾಡ ಅರಮನೆಗೆ ಹೋದೆವು. ಇದು ಇಂದೋರ್ನ ಹೃದಯ ಭಾಗದಲ್ಲಿರುವ ಏಳು ಅಂತಸ್ತುಗಳ ನಿರ್ಮಿತಿಯಾಗಿದೆ. 200ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಅರಮನೆಯು ಮರಾಠಾ, ಮೊಘಲ್ ಹಾಗೂ ಫ್ರೆಂಚ್ ಶೈಲಿಯ ಸಂಯೋಜನೆಯಿಂದ ಕೂಡಿದೆ. ಕಲ್ಲಿನ ಬುನಾದಿಯ ಮೇಲಿರುವ ಮರದ ಅಂತಸ್ತುಗಳ ಈ ಅರಮನೆಯು ಕೆಲವು ವರ್ಷಗಳ ಹಿಂದೆ ಬೆಂಕಿ ಅವಘಡಕ್ಕೆ ತುತ್ತಾದರೂ ಸಾಂಸ್ಕೃತಿಕ ಹೆಗ್ಗುರುತಾಗಿ ಗಮನ ಸೆಳೆಯುತ್ತದೆ. ಸನಿಹದಲ್ಲೇ, ಹೋಲ್ಕರ್ ಛಾತ್ರಿಗಳು, ಅಂದರೆ ಹೋಲ್ಕರ್ ಆಳ್ವಿಕೆಗಾರರಿಗೆ ಸಮರ್ಪಿಸಲಾದ ಸ್ಮಾರಕಗಳಿದ್ದು, ಹಿಂದಿನ ಶತಮಾನಗಳ ರಾಜಠೀವಿಯ ನೆನಪುಗಳನ್ನು ಮೀಟುತ್ತವೆ.
ರಾತ್ರಿ ಸರಾಫ ಬಜಾರ್ಗೆ ಎಡತಾಕಿದೆವು. ಇದು ಹಗಲಿನಲ್ಲಿ ಆಭರಣ ಮಾರುಕಟ್ಟೆಯಾಗಿ ಹಾಗೂ ರಾತ್ರಿಯಲ್ಲಿ ಖಾದ್ಯ ತಾಣವಾಗಿ ಚಲನಶೀಲತೆಯಿಂದಿರುವ ಪ್ರದೇಶವಾಗಿದೆ. ತಮ್ಮ ವ್ಯಾಪಾರ ತಾಣವು ಸದಾ ಲವಲವಿಕೆ ಹಾಗೂ ಸುರಕ್ಷಿತವಾಗಿರಬೇಕೆಂಬ ಉದ್ದೇಶದಿಂದ ಆಭರಣ ವರ್ತಕರು ರೂಪಿಸಿದ ಯೋಜನೆ ಇದಾಗಿದೆ. ಅಲ್ಲಿ ನಾವು ಜೋಶಿ ವಡಾವಾಲಾಗೆ ಹೋದೆವು. ಇಂದೋರ್ ಪ್ರವಾಸದಲ್ಲಿ ನನ್ನ ಕಟ್ಟಕಡೆಯ ಆಹಾರದ ಸವಿ ಅದಾಗಿತ್ತು! ಅಲ್ಲಿ ಬಾಯಲಿ ನೀರೂರಿಸುವ ಗರಡು ಚಾಟ್, ಭುತ್ತೆ ಕಾ ಕೀಸ್, ಬಿಸಿಬಿಸಿ ತಂದೂರಿ, ಮಾಲ್ಪುವಾ, ರಾಬ್ಡಿಯೊಂದಿಗೆ ಜಲೇವಿ ಹಾಗೂ ನನ್ನ ಅಚ್ಚುಮೆಚ್ಚಿನ ಜಾಮೂನ್ ಸವಿದೆ. ರಾತ್ರಿ 10ರಿಂದ ಬೆಳಗಿನ ಜಾವ 3ರವರೆಗೆ ಚಟುವಟಿಕೆಯಿಂದಿರುವ ಮಾರುಕಟ್ಟೆ ಇದಾಗಿದ್ದು, ತಡರಾತ್ರಿಯ ಅಲೆಮಾರಿಗಳಿಗೆ ಹೇಳಿ ಮಾಡಿಸಿದಂತಿದೆ.
ನಮ್ಮ ಈ ಪ್ರವಾಸವು ಕೇವಲ ಪ್ರೇಕ್ಷಣೀಯ ಸ್ಥಳದ ದರ್ಶನವಾಗಲೀ ಅಥವಾ ಆಹಾರ ಸವಿಯುವ ಅವಧಿಯಾಗಲೀ ಆಗಿರಲಿಲ್ಲ. ಅದಕ್ಕೊಂದು ಕೌಟುಂಬಿಕ ಆಯಾಮವಿತ್ತು . ಸಾರಾ, ನೀಲ್ ಹಾಗೂ ಹೆತಾ ಒಂದು ರೂಮಿನಲ್ಲಿ ಉಳಿದುಕೊಂಡಿದ್ದರು. ಪುಟಾಣಿ ರಯಾಗೆ ಆಗಷ್ಟೇ ಅತ್ತೆಯೂ ಆಗಿದ್ದ ಸಾರಾಳಿಗೆ ಅದೇ ಕಾರಣಕ್ಕಾಗಿ ಸಂಭ್ರಮಿಸುವ ಅವಧಿಯೂ ಆಗಿತ್ತು. ಪುಟ್ಟಿಯ ಖುಷಿಗಾಗಿ ಕತೆಗಳನ್ನು ಹಾಗೂ ಹಾಡುಗಳನ್ನು ಹೇಳುತ್ತಾ ನಾವೂ ಸಂತಸಪಟ್ಟೆವು. ಇಲ್ಲಿ ಹೇಳಬೇಕಾದ ಮತ್ತೊಂದು ಸಂಗತಿಯೆಂದರೆ, ಪುಟ್ಟ ಕೂಸಿನೊಂದಿಗೆ ಪ್ರವಾಸ ಮಾಡುವುದು ಜನರು ಅಂದುಕೊಂಡಿರುವುದಕ್ಕಿಂತಲೂ ಸುಲಭವಾದುದಾಗಿದೆ. ಅದರಲ್ಲೂ, ಕುಟುಂಬ ಸದಸ್ಯರ ಬೆಂಬಲವಿದ್ದರಂತೂ ಇದು ಇನ್ನಷ್ಟು ಸಲೀಸು. ಆ ಪ್ರವಾಸದ ವೇಳೆ ನಾವು ಅನುಭವಿಸಿದ ಅನುಬಂಧದ ಕ್ಷಣಗಳು ಅಮೂಲ್ಯವಾದವು.
ಪ್ರವಾಸದ ಕಡೆಯ ದಿನ ವಿಮಾನ ನಿಲ್ದಾಣಕ್ಕೆ ಹೊರಡಲು ಬ್ಯಾಗ್ಗಳನ್ನು ಪ್ಯಾಕ್ ಮಾಡಿದೆವು. ನಾವು ಪ್ರತಿಯೊಬ್ಬರೂ ಡಿಜಿಯಾತ್ರಾ ಚೆಕ್-ಇನ್ ಮಾಡಿರುವುದನ್ನು ಸಾರಾ ಖಾತರಿಪಡಿಸಿಕೊಂಡಳು. ಆಕೆ ಡಿಜಿಟಲ್ ವಿಧಾನದಲ್ಲಿ ತನ್ನ ಅಜ್ಜಿಯನ್ನು ಮುನ್ನಡೆಸುತ್ತಿದ್ದುದನ್ನು ನೋಡುವುದು ಅತ್ಯಾಪ್ತವೆನ್ನಿಸುತ್ತಿತ್ತು . ಭಾರತೀಯ ಕುಟುಂಬಗಳ ಪ್ರವಾಸಗಳು ಹೀಗೆಯೇ ಇರುತ್ತವೆ ನೋಡಿ. ತಂತ್ರಜ್ಞಾನವನ್ನು ಲೀಲಾಜಾಲವಾಗಿ ಬಳಸುವ ಯುವ ತಲೆಮಾರಿನವರು ಹಾಗೂ ಅನುಭವಿಗಳಾದ ಹಿರಿಯರು ಪರಸ್ಪರ ಒಂದನ್ನೊಂದು ಕಲಿಯುವುದು, ಸ್ಥಳ, ಸಮಯ ಹಾಗೂ ನೆನಪುಗಳನ್ನು ಹಂಚಿಕೊಳ್ಳುವ ಸಂದರ್ಭಗಳು ಅವಾಗಿರುತ್ತವೆ.
ಇಂದೋರ್ ನಮ್ಮನ್ನು ಸಮ್ಮೋಹನಗೊಳಿಸಿತ್ತು. ಭಾರತದ ಅತ್ಯಂತ ಸ್ಚಚ್ಛ ನಗರಿಯೆಂಬ ಹೆಗ್ಗಳಿಕೆಗೆ ಪಾತ್ರವಾದ ಈ ನಗರವು ನಮಗೆ ಒಂದು ವಿರಾಮದ ಅವಧಿಯನ್ನಷ್ಟೇ ಅಲ್ಲದೆ ಅದಕ್ಕೂ ಮಿಗಿಲಾದುದನ್ನು ಮೊಗೆದು ನೀಡಿತ್ತು. ಆನಂದದ ಕ್ಷಣಗಳು, ಪರಂಪರೆಯ ದರ್ಶನ, ಕೌಟುಂಬಿಕ ಅನುಬಂಧ ಹಾಗೂ ಎಣಿಕೆಗೂ ಮೀರಿದ ನೆನಪುಗಳನ್ನು ಲಭ್ಯವಾಗಿಸಿತು. ಭವ್ಯ ಅರಮನೆಗಳ ನೋಟ, ನದಿದಂಡೆಯ ಘಟ್ಟಗಳ ಪ್ರಶಾಂತ ರಮಣೀಯತೆ, ಕೈನೇಯ್ಗೆಯ ಸೀರೆಗಳ ಪಾರಂಪರಿಕ ಸ್ಪರ್ಶ ಹಾಗೂ ನಡುರಾತ್ರಿ ಸವಿದ ಖಾದ್ಯಗಳ ಸವಿ ಹೀಗೆ ಅಲ್ಲಿನ ಪ್ರತಿಕ್ಷಣವೂ ಅರ್ಥಪೂರ್ಣವಾಗಿತ್ತು.
ನಿಮ್ಮ ಬ್ಯಾಗುಗಳನ್ನೂ ಸಿದ್ಧಪಡಿಸಿಕೊಳ್ಳಿ; ಪ್ರೀತಿಪಾತ್ರರನ್ನೂ ಒಗ್ಗೂಡಿಸಿಕೊಳ್ಳಿ ಹಾಗೂ ಹೊರಡಲು ತಯಾರಾಗಿ. ಜೀವಂತಿಕೆಯನ್ನು ಉಕ್ಕಿಸುವ ಭರಪೂರ ಕತೆಗಳಿಂದ ತುಂಬಿದ ತಾಣಗಳು ನಮ್ಮ ಭಾರತದಲ್ಲಿ ಬಹಳಷ್ಟಿವೆ. ನೀವು ಎಂದೆಂದೂ ಮರೆಯಲಾಗದ ಕೌಟುಂಬಿಕ ಪ್ರವಾಸವನ್ನು ಅನುಭವಿಸಲು ತಡ ಇನ್ನೇಕೆ?
+++
ನಿಮ್ಮೊಳಗಿನ ಅನ್ವೇಷಕನನ್ನು ಬಡಿದೆಬ್ಬಿಸಲು ಸಿದ್ಧರಿದ್ದೀರಾ? ಬನ್ನಿ ಪರ್ಯಟನೆ ಮಾಡೋಣ!
ಭೋಪಾಲ್ ಸಾಂಚಿ ಮದಾಯಿ
ಇಂದೋರ್ ಉಜ್ಜಯಿನಿ ಮಂಡು
ಭೋಪಾಲ್ ಪಚಮಟೀ, ಮದಾಯಿ
ಬೆಸ್ಟ್ ಆಫ್ ಮಧ್ಯಪ್ರದೇಶ್
ಟೈಗರ್ ಮ್ಯಾರಥಾನ್ ಮಧ್ಯಪ್ರದೇಶ್
ಜ್ಯೂವೆಲ್ಸ್ ಆಫ್ ಮಧ್ಯಪ್ರದೇಶ್
ವಂಡರ್ಸ್ ಆಫ್ ಮಧ್ಯಪ್ರದೇಶ್
ಆಲ್ ಆಫ್ ಮಧ್ಯಪ್ರದೇಶ್
ಸಮೃದ್ಧ ಭಾರತದ ಮಡಿಲಿನಲ್ಲಿ ವಿಹರಿಸಿ ‘ವೀಣಾ ವರ್ಲ್ಡ್’ನೊಂದಿಗೆ
ಮಧ್ಯಪ್ರದೇಶ
ಚಲೋ, ಬ್ಯಾಗ್ ಭರೋ, ನಿಖಲ್ ಪಡೋ!
Post your Comment
Please let us know your thoughts on this story by leaving a comment.