Published in the Sunday Vijay Karnataka on 22 June 2025
ಅದೆಷ್ಟೇ ಸಣ್ಣ ಸಂಗತಿಯಾಗಿರಲಿ, ಅದು ‘ಹೀಗೆಯೇ ಇರಬೇಕು’ ಎಂಬ ತೀವ್ರ ಹಟಮಾರಿತನ ಅವರ ಸ್ವಭಾವವಾಗಿತ್ತು. ಅವರ ಹಟಧೋರಣೆ ಅತಿರೇಕದ್ದಾಗಿತ್ತು. ಅವರ ಬಗ್ಗೆ ಇಂದಿಗೂ ಕತೆಗಳನ್ನು ಹೇಳಲಾಗುತ್ತದೆ.
ಹನ್ನೆರಡು ವರ್ಷಗಳ ಹಿಂದೆ ‘ವೀಣಾ ವರ್ಲ್ಡ್’ ಆರಂಭಗೊಂಡಾಗ ನಾವು ಭಾರತದ ಪ್ರವಾಸದೊಂದಿಗೆ ನಮ್ಮ ಪಯಣ ಆರಂಭಿಸಿದೆವು. ಅದು ಬಹುಮಟ್ಟಿಗೆ ನಮ್ಮದೇ ‘ಭಾರತ್ ಜೋಡೋ ಯಾತ್ರೆಯಂತಿತ್ತು. ಅದಾದಮೇಲೆ ನಾವು ಇಡೀ ಪ್ರಪಂಚವನ್ನು ಪರ್ಯಟನೆ ಮಾಡಿದ್ದೇವೆ. ಜಗತ್ತನ್ನು ‘ವೀಣಾ ವರ್ಲ್ಡ್’ ದೃಷ್ಟಿಕೋನದೊಂದಿಗೆ ನೋಡಬೇಕೆಂಬುದು ನಮ್ಮ ತುಡಿತವಾಗಿತ್ತು.
ಅಮೆರಿಕದ ಪೂರ್ವದಿಂದ ಪಶ್ಚಿಮದವರೆಗಿನ 15 ದಿನಗಳ ಭೇಟಿಯು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರವಾಸವಾಗಿತ್ತು. ಈಗ ‘ವೀಣಾ ವರ್ಲ್ಡ್’ನಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಶಿಲ್ಪಾ ಮೋರೆ ಅವರೂ ಆಗ ನನ್ನೊಂದಿಗಿದ್ದರು. ದಿನೇಶ್ ಬಂದಿವಡೇಕರ್ ನಮ್ಮ ಪ್ರವಾಸ ವ್ಯವಸ್ಥಾಪಕ (ಟೂರ್ ಮ್ಯಾನೇಜರ್)ರಾಗಿದ್ದರು. ಟೂರ್ ಮ್ಯಾನೇಜರುಗಳಾಗಿ ಸ್ವತಃ ನಾವು ಕೆಲಸ ಮಾಡುತ್ತಿದ್ದ ದಿನಗಳು ಅದಾಗಲೇ ಸಂದು ಹೋಗಿದ್ದವು. ಆ ವೇಳೆಗಾಗಲೇ ನಮ್ಮೊಂದಿಗಿದ್ದ ಹಲವರು ಟೂರ್ ಮ್ಯಾನೇಜರುಗಳಾಗಿ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದರು ಹಾಗೂ ಅವರು ನಮಗಿಂತ ಹೆಚ್ಚು ವೃತ್ತಿಪರರೂ ಆಗಿದ್ದರು. ಹೀಗಾಗಿ, ನಾವು ಟೂರ್ ಮ್ಯಾನೇಜರುಗಳಾಗಿ ಮುಂದುವರಿಯುವ ಅಗತ್ಯ ಕೂಡ ಇರಲಿಲ್ಲ. ಅದಾಗಿ ಕಳೆದ ಹನ್ನೆರಡು ವರ್ಷಗಳಲ್ಲಿ ಹೊಸ ಪ್ರವಾಸ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ನಾವು ಸಾಕಷ್ಟು ಪ್ರಯಾಣ ಮಾಡಿದ್ದೇವೆ. ಜೊತೆಗೆ, ನಮ್ಮ ಅತಿಥಿಗಳ ದೃಷ್ಟಿಯಿಂದ ವೀಕ್ಷಿಸುವ ಸಲುವಾಗಿ ‘ವೀಣಾ ವರ್ಲ್ಡ್’ ಪ್ರವಾಸಗಳೊಂದಿಗೆ ಕೂಡ ಸಂಚರಿಸಿದ್ದೇವೆ. ಇನ್ನು, ‘ವೀಣಾ ವರ್ಲ್ಡ್’ನೊಂದಿಗೆ ಪ್ರವಾಸ ತೆರಳುವಾಗ ಎಷ್ಟೇ ಅಚ್ಚುಕಟ್ಟಾಗಿ ಪ್ರವಾಸವನ್ನು ಯೋಜಿಸಿದ್ದರೂ ಎಲ್ಲಿಯೂ ಲೋಪಕ್ಕೆ ಆಸ್ಪದವಾಗದಂತೆ ನಿರ್ವಹಿಸುವ ಜವಾಬ್ದಾರಿ ಬಗ್ಗೆ ಗಮನ ಹರಿಸುವುದು ಇದ್ದೇ ಇರುತ್ತದೆ.
ಈ ವರ್ಷವೂ ನಾವು ‘ವೀಣಾ ವರ್ಲ್ಡ್’ ತಂಡದೊಂದಿಗೆ ಕೆಲವು ಪ್ರವಾಸಗಳಿಗೆ ತೆರಳುತ್ತಿದ್ದೇವೆ. ನಾವೀಗ ಹಿರಿಯ ನಾಗರಿಕರಾಗಿದ್ದು, ಪ್ರವಾಸದ ಬಗೆಗಿನ ನಮ್ಮ ದೃಷ್ಟಿಕೋನವು ಬದಲಾಗಿದೆ. ಇದೇ ಕಾರಣಕ್ಕೆ, ‘ವೀಣಾ ವರ್ಲ್ಡ್’, ಇದೀಗ ಹಿಂದೆಂದಿಗಿಂತಲೂ ಹೆಚ್ಚು ‘ವಿಚಕ್ಷಣೆಯಲ್ಲಿದೆ’ ಎನ್ನಬಹುದು.
ಅದಿರಲಿ, ಈಗ ನಮ್ಮ ಅಮೆರಿಕದ ಪ್ರವಾಸದ ವಿಷಯಕ್ಕೆ ವಾಪಸ್ಸು ಬರೋಣ. ನಾವು ನ್ಯೂಯಾರ್ಕಿನಿಂದ ಪಯಣ ಶುರುಮಾಡಿದೆವು. ನಾವು ಪ್ರಪ್ರಥಮವಾಗಿ ಭೇಟಿ ನೀಡಿದ ಪ್ರೇಕ್ಷಣೀಯ ಸ್ಥಳವೆಂದರೆ, ಸ್ಯಾಚ್ಯು ಆಫ್ ಲಿಬರ್ಟಿ. ಯಾರೇ ಆಗಲಿ ಆ ಪ್ರತಿಮೆಯ ಮುಂದೆ ನಿಲ್ಲುತ್ತಿದ್ದಂತೆಯೇ ನಿಬ್ಬೆರಗು ಮೂಡುತ್ತದೆ. ನಾವೆಲ್ಲರೂ ಪರಸ್ಪರ ಫೋಟೋಗಳನ್ನು ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದೆವು. ಅದೇ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ ಮಹಿಳೆಯೊಬ್ಬರನ್ನು ಕೇಳಿದೆ-“ನಿಮಗೆ ಯಾವ ರೀತಿಯ ಭಾವನೆಗಳು ಉಂಟಾಗುತ್ತಿವೆ?” ಎಂದು. ನಾನು ಹೀಗೆ ಕೇಳುತ್ತಿದ್ದಂತೆಯೇ ಆಕೆ ಅಳಲು ಆರಂಭಿಸಿಬಿಟ್ಟರು. ನನಗೆ ಗಲಿಬಿಲಿಯಾಯಿತು. ಆಕೆಯ ಪಕ್ಕದಲ್ಲಿ ಕುಳಿತು, ‘ಏನಾಯಿತು?’ ಎಂದು ವಿಚಾರಿಸಿದೆ. ಆಗ ಆಕೆ, “ನಾನು ಇದುವರೆಗೂ ಬದುಕಿನುದ್ದಕ್ಕೂ ಕಾಣುತ್ತಾ ಬಂದ ಕನಸು ಇಂದು ನನಸಾಗಿದೆ. ನಾನು ಇದಕ್ಕಾಗಿಯೇ ಹಣವನ್ನು ಉಳಿಸುತ್ತಾ ಬಂದಿದ್ದೆ. ನಾನು ಸ್ಯಾಚ್ಯು ಆಫ್ ಲಿಬರ್ಟಿ ಮುಂದೆ ನಿಂತಿದ್ದೇನೆ ಎನ್ನುವುದನ್ನು ನನಗೆ ಈಗಲೂ ನಂಬಲಾಗುತ್ತಿಲ್ಲ. ನಾನು ಈವರೆಗೆ ಸಂಕಷ್ಟಗಳನ್ನೆಲ್ಲಾ ಎದುರಿಸುತ್ತಾ ಹೋರಾಟ ನಡೆಸಿದ್ದುದು ಇದಕ್ಕಾಗಿಯೇ” ಎಂದರು. ಅವು ಬದುಕಿನಲ್ಲಿ ಸಾರ್ಥಕ್ಯ ಅನುಭವಿಸಿದ ಭಾವದಿಂದ ಮೂಡಿದ ಕಣ್ಣಾಲಿಗಳಾಗಿದ್ದವು.
ನನ್ನ ಪ್ರವಾಸದೋಮ್ಯದ ವೃತ್ತಿಬದುಕಿನಲ್ಲಿ 15 ವರ್ಷಗಳ ಕಾಲ ಟೂರ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದೇನೆ. ನಾನು ಇತರ ಪ್ರವಾಸ ಸಂಸ್ಥೆಗಳ ಜೊತೆ ಪ್ರವಾಸಿಗನಾಗಿಯೂ ವಿದೇಶಗಳನ್ನು ಸುತ್ತಿದ್ದೇನೆ. ಈ ನನ್ನ ನಿರಂತರ ಪ್ರಪಂಚ ಯಾನದ ವೇಳೆ “ಇದುವರೆಗೆ ಸಂಕಷ್ಟಗಳನ್ನೆಲ್ಲಾ ಎದುರುಸಿ ಹೋರಾಟ ನಡೆಸಿದ್ದುದು ಇದಕ್ಕಾಗಿಯೇ” ಎಂಬರ್ಥದ ಉದ್ಗಾರವನ್ನು ಲೆಕ್ಕವಿಲ್ಲದಷ್ಟು ಬಾರಿ ಕಿವಿಯಾರೆ ಕೇಳಿಸಿಕೊಂಡಿದ್ದೇನೆ. ಪ್ರವಾಸಿಗರು ತಾವು ಅದುವರೆಗೂ ಕನಸು ಕಾಣುತ್ತಿದ್ದ ಪ್ರಪಂಚದ ವಿಸ್ಮಯದ ನೋಟವನ್ನು ಕಣ್ಣೆದುರು ಕಣ್ತುಂಬಿಕೊಳ್ಳುತ್ತಿರಾಗ ಅದೆಷ್ಟೋ ಬಾರಿ ನಾನು ಕೇವಲ ‘ಗಮನಿಸುವಿಕೆಯ ಅವಸ್ಥೆ’ಗೆ ಹೋಗಿಬಿಡುತ್ತೇನೆ. ಅಂತಹ ಕ್ಷಣಗಳಲ್ಲಿ ಅವರುಗಳ ಮುಖದಲ್ಲಿ ಸಾರ್ಥಕ್ಯದ ತಿಳಿನಗೆ ಹರಡುವುದನ್ನು ಗಮನಿಸಿದ್ದೇನೆ. ನಯಾಗರಾ ಜಲಪಾತ, ಐಫೆಲ್ ಟವರ್, ತಾಜ್ ಮಹಲ್ ಇವುಗಳನ್ನು ನೋಡನೋಡುತ್ತಲೇ ಅವರ ಕಣ್ಣುಗಳಲ್ಲಿ ನೀರು ತುಂಬುವುದನ್ನು ಕಂಡಿದ್ದೇನೆ. ಆ ಸ್ಥಳಗಳಿಗೆ ಮೊದಲ ಸಲ ಭೇಟಿ ನೀಡಿದಾಗ ನನಗೂ ಹಾಗೆಯೇ ಆಗಿತ್ತು ಎಂಬುದನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಪ್ರಪಂಚದ ಬೇರೆ ಬೇರೆ ಮೂಲೆಗಳಲ್ಲಿರುವ ಬೆರಗಿನ ತಾಣಗಳಿಗೆ ತೆರಳಿದಾಗ ನಮ್ಮನ್ನು ಆವರಿಸುವ ಶಾಂತಿಯನ್ನು ನಿಜವಾಗಿಯೂ ಬಣ್ಣಿಸಲಾಗದು. ಭಾರತದಲ್ಲಿ ಕನ್ಯಾಕುಮಾರಿ, ಆಫ್ರಿಕಾದಲ್ಲಿ ಕೇಪ್ ಆಫ್ ಗುಡ್ ಹೋಪ್, ಆಸ್ಟ್ರೇಲಿಯಾದಲ್ಲಿ ಕೇಪ್ ಲೀಯುವಿನ್, ದಕ್ಷಿಣ ಅಮೆರಿಕದ ಚಿಲಿಯಲ್ಲಿ ಕೇಪ್ ಹಾರ್ನ್, ಪೋರ್ಚುಗಲ್ನಲ್ಲಿ ಕೇಪ್ ಸ್ಯಾಗ್ರೆಸ್, ಆರ್ಕ್ಟಿಕ್ಗೆ ಮುಖಮಾಡಿ ನಿಂತಿರುವ ನಾರ್ಥ್ ಕೇಪ್…. ನಾನು ನೋಡಿರುವ ಈ ಎಲ್ಲ ತಾಣಗಳೂ ಹಾಗೂ ನೋಡಲು ಬಾಕಿ ಉಳಿದಿರುವ ಇನ್ನೂ ಹಲವು ಸ್ಥಳಗಳು ನನ್ನನ್ನು ಮೊದಲಿಗಿಂತಲೂ ಹೆಚ್ಚು ಪ್ರಬಲವಾಗಿ ಸೆಳೆಯುತ್ತಿವೆ. ಬಹುಶಃ ನನ್ನ ಮುಂದಿನ ದೃಢನಿಶ್ಚಯದ ಪ್ರಯತ್ನಗಳು ಅಲ್ಲಿನ ಭೇಟಿಗಳನ್ನು ಈಡೇರಿಸಿಕೊಳ್ಳುವ ದಿಕ್ಕಿನಲ್ಲೇ ಸಾಗಲಿವೆ. ಅಂತಹ ಹಟವು ಒಳ್ಳೆಯದೋ ಅಥವಾ ಕೆಟ್ಟದ್ದೋ? ಯಾವುದೇ ವ್ಯಕ್ತಿಯು ಹಟವನ್ನು ಹೊಂದಿರಬೇಕೋ ಅಥವಾ ಹೊಂದಿರಬಾರದೋ?
ಪಂಡಿತ್ ಭೀಮಸೇನ್ ಜೋಶಿ ಅವರ ಕಂಠದಲ್ಲಿ ಮೂಡಿರುವ ಸಂತ ತುಕಾರಾಂ ಮಹಾರಾಜ್ ಅವರ ಅಭಂಗ್-“ಅನುಭವಿಸಿದ ಸಂಕಷ್ಟಗಳೆಲ್ಲಾ ಇದಕ್ಕಾಗಿಯೇ; ಅಂತಿಮ ದಿನವು ಮಧುರಮಯವಾಗಿರಲಿ”- ಎಂಬುದು ಬೇರಾವುದೂ ನೀಡದ ಆನಂದವನ್ನು ಮೂಡಿಸುತ್ತದೆ.
ಆದರೂ, ನಮ್ಮ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ನಾವು ಆಗಾಗ “ನಿಮಗೇಕೆ ಇದರ ಬಗ್ಗೆ ಇಷ್ಟೊಂದು ಹಟ?” ಎಂಬುದನ್ನು ಕೇಳುತ್ತಿರುತ್ತೇವೆ. “ಹೋರಾಟ’ ಅಥವಾ “ಹಟ” ಎಂಬುದು ಬಹಳಷ್ಟು ಸಂದರ್ಭಗಳಲ್ಲಿ ನಕಾರಾತ್ಮಕವಾಗಿ ಧ್ವನಿಸಬಹುದು. ಇದು ‘ಗೀಳು’ ಎಂಬುದಕ್ಕೆ ಪರ್ಯಾಯ ಪದದಂತೆ ಕೇಳಿಸಬಹುದು. ಉದಾಹರಣೆಗೆ, ಒಂದೊಮ್ಮೆ ಪೋಷಕರೇನಾದರೂ ಹೆತ್ತ ಮಕ್ಕಳಿಗೆ ಏನು ಬೇಕು-ಏನು ಬೇಡ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ, ಅವರ ಸಾಮರ್ಥ್ಯ ಯಾವುದರಲ್ಲಿದೆ ಎಂಬುದನ್ನು ಗುರುತಿಸದೆ, ಸ್ವತಃ ತಾವು ಈಡೇರಿಸಿಕೊಳ್ಳಲಾಗದ ಕನಸುಗಳನ್ನು ಅವರ ಮೇಲೆ ಬಲವಂತವಾಗಿ ಹೇರಿದರೆ ಆಗ ಅದು ಕೇವಲ ಮೊಂಡಾಟ ಎನ್ನಿಸಿಕೊಳ್ಳುತ್ತದೆ. ಆದರೆ, ಪೋಷಕರು ತಮ್ಮ ಮಕ್ಕಳ ಪ್ರತಿಭೆ ಗುರುತಿಸಿ, ಅದಕ್ಕೆ ತಕ್ಕಂತೆ ಉತ್ತೇಜನ ನೀಡಿ ಬೆಂಬಲಿಸಿದರೆ ಹಾಗೂ ಅದರಿಂದಾಗಿ ಮಕ್ಕಳು ಯಶಸ್ವಿಯಾದರೆ ಆಗ ಎಲ್ಲರೂ ಒಟ್ಟಾಗಿ ಸೇರಿ “ಇದಕ್ಕಾಗಿಯೇ ಇದುವರೆಗೆ ಹೋರಾಟ ನಡೆಸಿದ್ದು” ಎಂದು ಹೇಳಿಕೊಳ್ಳಬಹುದಾದ ಸನ್ನಿವೇಶ ಸೃಷ್ಟಿಯಾಗುತ್ತದೆ.
ಈ ಎರಡು ಸನ್ನಿವೇಶಗಳಲ್ಲೂ ಬಳಸುವ ಪದ ಒಂದೇ- ಅದು ‘ಹೋರಾಟ’. ಆದರೆ ಅದು ಮೂಡಿಸುವ ಭಾವನೆಗಳಲ್ಲಿ ಎಷ್ಟೊಂದು ವ್ಯತ್ಯಾಸ! ಮಕ್ಕಳಿಗೆ ಯಾವ ಮಾರ್ಗದಲ್ಲಿ ನಡೆಯಬೇಕೆಂದು ಗೊತ್ತಿಲ್ಲದಿರುವಾಗ ಪೋಷಕರು ಪಟ್ಟುಬಿಡದೆ ಅವರಿಗೆ ಮಾರ್ಗದರ್ಶನ ಮಾಡುವುದು ರಚನಾತ್ಮಕ ಹೋರಾಟವೇ ಸೈ. ವ್ಯಾಪಾರೋದ್ಯಮದಲ್ಲಿ ಕೂಡ ನಾವು ಇದನ್ನು ಬೇರೆ ಬಗೆಯಲ್ಲಿ ಕಾಣುತ್ತೇವೆ. ದೂರದೃಷ್ಟಿಯುಳ್ಳ ನಾಯಕರು ಕೆಲವೊಮ್ಮೆ ತಮ್ಮ ನಿರ್ಣಾಯಕ ಅಧಿಕಾರವನ್ನು (ವಿಟೊ) ಚಲಾಯಿಸಬೇಕಾಗಿ ಬರುತ್ತದೆ. ಏಕೆಂದರೆ, ಇಲ್ಲದಿದ್ದರೆ ಅಂತಿಮ ಫಲಿತಾಂಶ ಏನಾಗುತ್ತದೆ ಎಂಬುದು ಅವರಿಗೆ ಮುಂಚಿತವಾಗಿಯೇ ತಿಳಿದಿರುತ್ತದೆ.
ಈ ಬಗ್ಗೆ ಆಲೋಚಿಸುವಾಗ ನನಗೆ ಸ್ಟೀವ್ ಜಾಬ್ಸ್ ನೆನಪಾಗುತ್ತಿದ್ದಾರೆ. ಯಾವುದೇ ಚಿಕ್ಕ ವಿಷಯವಾದರೂ ಸರಿ, ‘ಹೀಗೆಯೇ ಆಗಿ ತೀರಬೇಕು’ ಎಂದು ಅವರು ಹಟ ಹಿಡಿಯುತ್ತಿದ್ದರು. ಅವರ ಈ ಸ್ವಭಾವ ಅತಿ ಎನ್ನಿಸುತ್ತಿತ್ತು. ಅವರ ಬಗ್ಗೆ ಇಂದಿಗೂ ಕತೆಗಳನ್ನೂ ಹೇಳಲಾಗುತ್ತದೆ. ಆದರೆ, ಅವರ ಈ ‘ಹಟ’ದಿಂದಾಗಿಯೇ ಆಪಲ್ನ ಸೊಬಗು, ವಿನ್ಯಾಸ, ಸೂಕ್ಷ್ಮತೆ ಹಾಗೂ ನಿಖರತೆಯನ್ನು ಹಿಂದಿಕ್ಕಲು ಇಂದಿಗೂ ಬೇರೆ ಯಾರಿಗೂ ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ನಾನು ಸ್ಟೀವ್ ಜಾಬ್ಸ್ ಅವರ ಅತಿಯಾದ ‘ಹಟಮಾರಿತನ’ವನ್ನು ಸಕಾರಾತ್ಮಕ ದೃಢನಿಶ್ಚಯ ಎಂದು ಹೇಳಲು ಇಚ್ಛಿಸುತ್ತೇನೆ. ಇಂತಹ ಸ್ವಭಾವ ಬಹಳಷ್ಟು ವೇಳೆ ಅಗತ್ಯವೂ ಹೌದು, ಮೌಲ್ಯಯುತವೂ ಹೌದು.
.
ವ್ಯಕ್ತಿಗಳು ಹಾಗೂ ಸಂಸ್ಥೆಗಳಲ್ಲಿ ಇರುವಂತೆಯೇ ಸಮಾಜಗಳಲ್ಲೂ ಇಂತಹ ಹಟಮಾರಿ ಧೋರಣೆ ಕಂಡುಬರಬಹುದು. ಕೆಲವು ದಶಕಗಳ ಹಿಂದೆ ಮದುವೆಯಾದ ಮೇಲೆ ಮಹಿಳೆಯರ ಹೆಸರನ್ನು ಬದಲಾಯಿಸುವ ಪದ್ಧತಿ ರೂಢಿಯಲ್ಲಿತ್ತು. ಅದರ ಅಗತ್ಯವೇನಿತ್ತು ಎಂಬುದು ನನಗೆ ಇಂದಿಗೂ ಅರ್ಥವಾಗಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ, ನನಗೆ ಮುಂಚಿನಿಂದಲೂ ಉಪನಾಮವನ್ನು ಕೂಡ ಬದಲಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ, ಆಗಿನ ದಿನಮಾನಗಳಲ್ಲಿ ಸಾಮಾಜಿಕ ರೀತಿ ರಿವಾಜುಗಳ ಬಗ್ಗೆ ಇನ್ನೂ ಮುಕ್ತ ಧೋರಣೆ ಇರಲಿಲ್ಲ. ಹೀಗಾಗಿ, “ಯಾರಿಗೆ ಪಾಟೀಲ್ ಎಂಬ ಉಪನಾಮವಿರುತ್ತದೋ ಅಂಥವರ ಜೊತೆಯಲ್ಲೇ ನನಗೆ ಮದುವೆಯಾಗಲಿ” ಎಂದು ಮೌನವಾಗಿಯೇ ಪ್ರಾರ್ಥಿಸುತ್ತಿದ್ದೆ. ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿತೇನೋ!. ಮದುವೆಯಾದ ಮೇಲೂ ನಾನು ಪಾಟೀಲ್ ಆಗಿಯೇ ಉಳಿದಿರುವುದಕ್ಕೆ ಸುಧೀರ್ ಪಾಟೀಲ್ಗೆ ನನ್ನ ಧನ್ಯವಾದಗಳು.
ಈಗ ಪರಿಸ್ಥಿತಿ ಸುಧಾರಿಸಿದೆ. ಹೆಣ್ಣು ಮಕ್ಕಳು ಮದುವೆಯಾದ ಮೇಲೂ ತಮ್ಮ ಮೊದಲಿನ ಹೆಸರನ್ನೇ ಉಳಿಸಿಕೊಳ್ಳುತ್ತಾರೆ. ಇದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರಕ್ಕೆ ಸಂಬಂಧಿಸಿದ್ದು. ಯಾವುದೇ ಕಾರಣಕ್ಕೂ ಅವರನ್ನು ಈ ವಿಷಯದಲ್ಲಿ ಬಲವಂತ ಮಾಡಬಾರದು.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಹೆಸರಿಡುವಾಗ ತಂದೆ ಮತ್ತು ತಾಯಿ ಇಬ್ಬರ ಉಪನಾಮಗಳನ್ನೂ ಸೇರಿಸುವುದನ್ನು ಕಾಣುತ್ತಿದ್ದೇವೆ. ನಮ್ಮ ಮೊಮ್ಮಗಳಿಗೆ ಯಾವ ಹೆಸರಿಡಬೇಕು ಎಂಬುದನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ, 30-35 ವರ್ಷಗಳ ಹಿಂದೆ ಸ್ವತಃ ನನ್ನದೇ ಬಯಕೆ ಏನಾಗಿತ್ತು ಎಂಬುದು ಜ್ಞಾಪಕಕ್ಕೆ ಬಂತು. ಈಗ ಅದನ್ನು ‘ಸಮಾನತೆ’ ಎನ್ನಲಾಗುತ್ತದೆ. ಆದರೆ, ಬಾಯ್ಬಿಟ್ಟು ಜೋರಾಗಿ ಹೇಳಲಾಗದಿದ್ದರೂ, ಆಂತರ್ಯದಲ್ಲಿ ತನ್ನ ಹೆಸರು ಹಾಗೂ ಉಪನಾಮವು ಮದುವೆಯಾದ ಮೇಲೂ ಹಾಗೆಯೇ ಮುಂದುವರಿಯಬೇಕು ಎಂಬುದು ಪ್ರತಿಯೊಬ್ಬ ಹೆಣ್ಣು ಮಗಳ ಬಯಕೆಯಾಗಿರುತ್ತದೆ.
ಅಂದಂತೆ, ನಮ್ಮ ಮೊಮ್ಮಗಳ ವಿಷಯಕ್ಕೆ ಬಂದರೆ, ಅಪ್ಪ ಹಾಗೂ ಅಮ್ಮ ಇಬ್ಬರ ಕಡೆಯ ಉಪನಾಮಗಳನ್ನೂ ಸೇರಿಸಿ ಅವಳಿಗೆ ರಯಾ ಜಂಗ್ಲಾ ಪಾಟೀಲ್ ಎಂದು ನಾಮಕರಣ ಮಾಡಲಾಗಿದೆ. ಅವಳಿಗೆ ಆಗಿರುವ ಈ ನಾಮಕರಣವು ಅಧಿಕಾರದ ಸಮಾನ ಹಂಚಿಕೆಯ ಸಂಕೇತವೂ ಹೌದು. ಇದರಲ್ಲಿ ಕಾನೂನಿನ ತೊಡಕೇನೂ ಇಲ್ಲ. ನಾನು ನಮ್ಮ ಕಾನೂನು ಪರಿಣತರಾದ ವಕೀಲ ಸಂಜಯ್ ಖೇರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸಿದ್ದೆ. ಅವರು ‘ಮುಂದುವರಿಯಿರಿ’ ಎಂದು ಒಪ್ಪಿಗೆ ಕೊಟ್ಟರು. ನೀಲ್ ಮತ್ತು ಹೆತಾ ಅವರು ಸಂತಸಗೊಂಡರು. ನಮಗೂ ಖುಷಿಯಾಯಿತು. ನಮ್ಮ ಮಕ್ಕಳು ಅಪ್ರಸ್ತುತವಾದ ಸಾಮಾಜಿಕ ಪದ್ಧತಿಯ ಔಚಿತ್ಯದ ಬಗ್ಗೆ ಧ್ವನಿಯೆತ್ತಿ ತಮ್ಮದೇ ರೀತಿಯಲ್ಲಿ ಅದಕ್ಕೆ ಪರಿಹಾರವನ್ನೂ ಕಂಡುಕೊಂಡರು.
ಇದು ಅವರ ದೃಢನಿಶ್ಚಯದ ಪ್ರಯತ್ನವಾಗಿದ್ದರೆ ನನಗದು ತುಂಬಾ ಖುಷಿಯ ವಿಚಾರವೇ ಸರಿ. ಮಗ ಹಾಗೂ ಮಗಳ ನಡುವಿನ, ಹಾಗೆಯೇ ಅಪ್ಪ ಹಾಗೂ ಅಮ್ಮನ ಕಡೆಯ ಕುಟುಂಬಗಳ ನಡುವಿನ ಅಂತರವನ್ನು ನೀಗಿಸುವ ಹೋರಾಟ ಇದು. ಇಂತಹ ಪ್ರಯತ್ನಗಳಿಗೆ ನಮ್ಮ ಹೃತ್ಪೂರ್ವಕ ಬೆಂಬಲ ಸಲ್ಲಲೇಬೇಕು. ಇದೇ ವೇಳೆ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಸ್ಪೇನ್ ದಶವು ಹೀಗೆ ಹೆಸರಿಡುವ ಪದ್ಧತಿಯನ್ನು ಈ ಮುಂಚಿನಿಂದಲೇ ಅನುಸರಿಸುತ್ತಿದೆ.
ಜನರು, ಸಂಸ್ಥೆಗಳು ಹಾಗೂ ಸಮಾಜಗಳ ನಂತರ ದೇಶದ ವಿಷಯ ಮುನ್ನೆಲೆಗೆ ಬರುತ್ತದೆ. ದೇಶಗಳು ಕೂಡ ತಮ್ಮ ಕೆಲವು ಹಟಗಳನ್ನು ಅತಿರೇಕದ ಮಟ್ಟಕ್ಕೆ ಕೊಂಡೊಯ್ಯಬಹುದು. ಹೀಗಾದಾಗ, ಅದು ಜಾಗತಿಕ ಉದ್ವಿಗ್ನತೆಯನ್ನು ತಂದೊಡ್ಡುತ್ತದೆ. ಅಂಕಿ ಅಂಶಗಳ ಪ್ರಕಾರ, ಸದ್ಯ ಪ್ರಪಂಚದಲ್ಲಿ ಸುಮಾರು 35ರಷ್ಟು ಸಂಖ್ಯೆಯ ಸಣ್ಣ ಹಾಗೂ ದೊಡ್ಡ ಪ್ರಮಾಣದ ಯುದ್ಧಗಳು ನಡೆಯುತ್ತಿವೆ. ಇವೆಲ್ಲವೂ ಯಾರದ್ದೋ ವಿಧ್ವಂಸಕ ಮೊಂಡಾಟದ ದುಷ್ಪರಿಣಾಮವೇ ಹೌದು.
ಈ ಲೇಖನ ಬರೆಯುತ್ತಿರುವಾಗಿಯೇ ಮತ್ತೊಂದು ರಾಷ್ಟ್ರಿಯ ಹಟಮಾರಿತನದ ಬಗ್ಗೆ ಪ್ರಸ್ತಾಪಿಸಬೇಕು ಎನ್ನಿಸುತ್ತಿದೆ. ನನ್ನ ಬರವಣಿಗೆ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಯದ್ವಾತದ್ವ ಜಿಗಿಯುತ್ತದೆ ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ, ನಾನು ಸಾಹಿತ್ಯಿಕ ಕಟ್ಟುಪಾಡುಗಳಿಗೆ ಒಳಪಟ್ಟ ವೃತ್ತಿಪರ ಬರಹಗಾರ ಅಲ್ಲ ಎಂಬುದನ್ನು ಅಂಥವರ ಗಮನಕ್ಕೆ ತರಬಯಸುತ್ತೇನೆ.
ಕೆಲವು ದಿನಗಳ ಹಿಂದೆ ಥಾಣೆ ವೈಭವ್ ದಿಂದ ಮಿಲಿಂದ್ ಬಲ್ಲಾಳ್ ಅವರು ಫೋನ್ ಮಾಡಿ ಮಾತನಾಡುತ್ತಾ ನನ್ನ ಬರವಣಿಗೆಯನ್ನು ‘ಮುಕ್ತ್ ಚಿಂತನ್’ ಎಂದರು. ನನಗೆ ಆ ಪದಪ್ರಯೋಗ ಇಷ್ಟವಾಯಿತು. ಕಂಡ ಘಟನೆಗಳನ್ನು, ಅನುಭವಗಳನ್ನು, ಮೂಡಿದ ಆಲೋಚನೆಗಳನ್ನು ಸ್ನೇಹದ ಧಾಟಿಯ ಸಂವಾದದಂತೆ ಓದುಗರೊಂದಿಗೆ ಹಂಚಿಕೊಳ್ಳುವುದು ನನ್ನ ಬರವಣಿಗೆಯ ಕ್ರಮವಾಗಿದೆ.
ಪುನಃ, ನಾನು ಪ್ರಸ್ತಾಪಿಸಬೇಕು ಎಂದುಕೊಂಡಿರುವ ‘ರಾಷ್ಟ್ರೀಯ ಹಟಮಾರಿತನ’ಕ್ಕೆ ಬರುವುದಾದರೆ, ಪ್ರತಿಯೊಬ್ಬ ಭಾರತೀಯ ವ್ಯಕ್ತಿಗೂ ವಿದೇಶಗಳಲ್ಲಿ ತೊಂದರೆ ನೀಡುವ ವಿಷಯ ಅದಾಗಿದೆ: ಅಮೆರಿಕ, ಕೆನಡಾ, ಆಸ್ಪ್ರೇಲಿಯಾ, ನ್ಯೂಝಿಲೆಂಡ್ ಅಥವಾ ಇಂಗ್ಲೆಂಡಿನಲ್ಲಿ ಶೌಚಾಲಯಗಳಲ್ಲಿ ಜೆಟ್ ಸ್ಪ್ರೇಗಳು ಯಾಕೆ ಇರಬಾರದು? ನೈರ್ಮಲ್ಯ ಹಾಗೂ ಸ್ವಚ್ಛತೆಯ ಬಗ್ಗೆ ನಿರಂತರವಾಗಿ ಮಾತನಾಡುವ ದೇಶಗಳು ಇವು. ಆದರೂ ಈ ವಿಷಯದಲ್ಲಿ ಅವರು ಅದೆಷ್ಟು ಹಿಂದುಳಿದವರಾಗಿದ್ದಾರೆ?
ಜಾಗತಿಕ ತಾಪಮಾನ, ಸುಸ್ಥಿರತೆ ಬಗ್ಗೆ ಆ ದೇಶಗಳೆಲ್ಲಾ ಸುದೀರ್ಘವಾಗಿ ಮಾತನಾಡುತ್ತವೆ. ಆದರೆ, ಟಾಯ್ಲೆಟ್ ಪೇಪರ್ ಗಳಿಂದ ಉಂಟಾಗುವ ಬೃಹತ್ ಪ್ರಮಾಣದ ಪರಿಸರ ತ್ಯಾಜ್ಯದ ಸಂಗತಿಯನ್ನು ಕಡೆಗಣಿಸುತ್ತವೆ. ಸಾಮಾನ್ಯಳಾದ ನನ್ನ ಮನಸ್ಸಿಗೆ ಈ ವೈರುಧ್ಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.
ಅಭಿವೃದ್ಧಿ ಹೊಂದಿದವರೆAದು ಹೇಳಿಕೊಳ್ಳುವುದಾದರೆ ಜಪಾನ್ನಲ್ಲಿರುವಂತೆ ಸ್ವಯಂಚಾಲಿತ ಬೀಡೇ ಬಳಸಬಹುದು. ಅರಬ್ ದೇಶಗಳು, ಇತರ ಮುಸ್ಲಿಂ ದೇಶಗಳು ಮತ್ತು ಭಾರತದಲ್ಲಿ ಜೆಟ್ ಸ್ಪ್ರೇಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅವು ಸ್ವಚ್ಚ, ಸರಳ ಹಾಗೂ ಅನುಕೂಲಕರ. ಜೆಟ್ ಸ್ಪ್ರೇ ಬಳಕೆಗೆ ಬರುವ ಮುನ್ನ ಜನರು ಯಾವ್ಯಾವುದೋ ವಿಧಾನಗಳನ್ನು ಅನುಸರಿಸಬೇಕಾಗುತ್ತಿತ್ತು. ಆದರೆ ಈಗ ಅಂತಹ ತೊಂದರೆಗಳಿಗೆಲ್ಲಾ ಪರಿಹಾರ ಸಿಕ್ಕಿದೆ.
ಭಾರತದಲ್ಲಿ ಜೆಟ್ ಸ್ಪ್ರೇಗಳು 30-35 ವರ್ಷಗಳಿಂದ ಬಳಕೆಯಾಗುತ್ತಿವೆ. ಆದರೆ, ಪಶ್ಚಿಮದ ದೇಶಗಳು ಅದನ್ನು ಬಳಸಲು ನಿರಾಕರಿಸುತ್ತಿವೆ. ನನ್ನ ಪ್ರಕಾರ, ಇದು ಒಗ್ಗಿಕೊಳ್ಳಲು ಮನಸ್ಸು ಮಾಡದ ‘ಜಿಗುಟು ಧೋರಣೆಯ ನಿರಾಕರಣೆ’ಯಲ್ಲದೆ ಬೇರೇನೂ ಅಲ್ಲ. “ಎಲ್ಲವನ್ನೂ ಬಲ್ಲ” ಈ ದೇಶಗಳು ಪೂರ್ವದೇಶಗಳಿಂದ ಯಾವುದೊಂದನ್ನೂ ಕಲಿಯಲು ಹಿಂದೇಟು ಹಾಕುತ್ತವೆ ಎಂದು ತೋರುತ್ತದೆ. ಈ ಮೇಲೆ ಹೆಸರಿಸಿದ ದೇಶಗಳಲ್ಲಿ ಇಂದಿಗೂ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಮನೆಗಳಲ್ಲಿ ಕೂಡ ಜೆಟ್ ಸ್ಪ್ರೇ ಸೌಲಭ್ಯ ಇಲ್ಲ. ಶೌಚ ಕಾಗದ (ಟಾಯ್ಲೆಟ್ ಪೇಪರ್) ಹಾಗೂ ಅದಕ್ಕೆ ಸಂಬಂಧಿಸಿದ ಅವರ ಮೊಂಡಾಟ ಅವರಿಗಷ್ಟೇ ಸಮ್ಮತ.
ಒಂದಂತೂ ನಿಶ್ಚಿತ; ರಚನಾತ್ಮಕವೋ ಅಥವಾ ವಿಧ್ವಂಸಕವೋ, ಧನಾತ್ಮಕವೋ ಅಥವಾ ಋಣಾತ್ಮಕವೋ, ನಾವು ಆಯ್ಕೆ ಮಾಡಿಕೊಳ್ಳುತ್ತಿರುವುದು ಯಾವ ರೀತಿಯ ‘ಹಟಮಾರಿತನ’ ಎಂಬುದನ್ನು ನಾವು ಕಡ್ಡಾಯವಾಗಿ ಅವಲೋಕಿಸುತ್ತಲೇ ಇರಬೇಕು.
Post your Comment
Please let us know your thoughts on this story by leaving a comment.